ಉತ್ತರ ಕರ್ನಾಟಕದ ೧೦ ಜಿಲ್ಲೆಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಳಪೆ; ಜೆಡಿಎಸ್‌ ಆಕ್ರೋಷ

khushihost
ಉತ್ತರ ಕರ್ನಾಟಕದ ೧೦ ಜಿಲ್ಲೆಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಳಪೆ; ಜೆಡಿಎಸ್‌ ಆಕ್ರೋಷ

ಬೆಂಗಳೂರು: ಸ್ವತ: ಮುಖ್ಯಮಂತ್ರಿ ಬೊಮ್ಮಾಯಿ ಅವರ ಕ್ಷೇತ್ರ ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದ ಹತ್ತು ಜಿಲ್ಲೆಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಳಪೆ ಸಾಧನೆ ಮಾಡಿದೆ. ಈ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ತೀವ್ರ ಟೀಕೆ ಮಾಡಿದೆ.

ಸರ್ಕಾರ ಬಿಡುಗಡೆ ಮಾಡಿದ ವರದಿಯಲ್ಲಿ ಉತ್ತರ ಕರ್ನಾಟಕದ ಈ ಹತ್ತು ಜಿಲ್ಲೆಗಳಲ್ಲಿ ಬಡತನ, ಅಪೌಷ್ಟಿಕತೆ ತಾಂಡವವಾಡುತ್ತಿದೆ ಎಂದು ಹೇಳಲಾಗಿದೆ. ಕೋಮು ಹಿಂಸಾಚಾರ ಸೃಷ್ಟಿ ಮಾಡಿ ಜನರನ್ನು ಹಸಿವಿಗೆ ದೂಡಿದ ನೀಚ ಸರ್ಕಾರ ಎಂದು ಜೆಡಿಎಸ್ ಆಕ್ರೋಷ ಹೊರ ಹಾಕಿದೆ. ಈ ಕುರಿತು ಜೆಡಿಎಸ್ ಟ್ವೀಟ್ ಮಾಡಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳು ಹಲವಾರು ವರ್ಷ ಅಧಿಕಾರ ನಡೆಸಿ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಈ ಜಿಲ್ಲೆಗಳು ಸೋಲುವುದಕ್ಕೆ ಕಾರಣವಾಗಿವೆ. ಇವರ ಮಾನಗೇಡಿ ಆಡಳಿತದಿಂದ ಹಲವಾರು ಕ್ಷೇತ್ರಗಳು ಸೊರಗಿವೆ. ಈ ಸಲದ ಚುನಾವಣೆಯಲ್ಲಿ ಇವರಿಗೆ ಜನತೆ ಪಾಠ ಕಲಿಸಲು ಕಾತರರಾಗಿದ್ದಾರೆ ಎಂದು ಹೇಳಿದೆ.

ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಸೇರಿದಂತೆ ರಾಜ್ಯದ 102 ತಾಲೂಕುಗಳು ಅಪೌಷ್ಟಿಕತೆಯಂದ ತತ್ತರಿಸುತ್ತಿವೆ. ಹಸಿವು, ಉದ್ಯೋಗ, ನೈರ್ಮಲ್ಯ, ವಸತಿ, ಸುಸ್ಥಿರ ಆರ್ಥಿಕತೆ ಹೀಗೆ ಮುಖ್ಯ ವಿಷಯಗಳೆಲ್ಲ ರಾಜ್ಯ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಹಿಂದೆ ಬಿದ್ದಿವೆ. ಜನರ ಬದುಕನ್ನು ಇಷ್ಟು ನಿಕೃಷ್ಟವಾಗಿ ಕಾಣುವುದು ಕ್ರೌರ್ಯ ಎಂದು ಜೆಡಿಎಸ್ ಹೇಳಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಕೋಮು ಗಲಭೆ, ಕೋಮು ಹಿಂಸೆಯ 122 ಪ್ರಕರಣಗಳು ದಾಖಲಾಗಿವೆ.  ಕಳೆದ ಎರಡು ವರ್ಷಗಳಲ್ಲಿ 85 ಕೋಮು ಹಿಂಸಾಚಾರದ ಪ್ರಕರಣಗಳು ನಡೆಯಲು ಕಾರಣಗಳೇನು? ಹಿಂಸೆಗೆ ಬೌದ್ಧಿಕ ಚೌಕಟ್ಟು ನೀಡುವವರು ನಿಮ್ಮ ಶಾಸಕ, ಸಚಿವರುಗಳಲ್ಲವೇ? ನಿಮ್ಮ ಪಕ್ಷದ ಸಂಘಟನೆಗಳು ಮತ್ತದರ ‌ಕಾರ್ಯಕರ್ತರ ವಿರುದ್ಧ ಕ್ರಮ ಯಾವಾಗ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಜೆಡಿಎಸ್ ಪ್ರಶ್ನಿಸಿದೆ.

Share This Article