ನಿಲ್ಲಿಸದ ಬಸ್ಸಿಗೆ ಕಲ್ಲೆಸೆದ ಮಹಿಳೆಗೆ ₹ 5,000 ದಂಡ

khushihost
ನಿಲ್ಲಿಸದ ಬಸ್ಸಿಗೆ ಕಲ್ಲೆಸೆದ ಮಹಿಳೆಗೆ ₹ 5,000 ದಂಡ

ಕೊಪ್ಪಳ :  ಕೊಪ್ಪಳದಿಂದ ಹೊಸಪೇಟೆಗೆ ಹೋಗುತ್ತಿದ್ದ ಬಸ್‌ಗಳು ತಾಲೂಕಿನ ಹೊಸ ಲಿಂಗಾಪುರ (ಹುಲಿಗಿ ಕ್ರಾಸ್‌) ಬಳಿ ನಿಲ್ಲಿಸದ ಕಾರಣ ಕೋಪಗೊಂಡ ಮಹಿಳೆಯೊಬ್ಬರು ಸರ್ಕಾರಿ ಬಸ್‌ ಗೆ ಕಲ್ಲು ತೂರಿ ಅದರ ಗಾಜನ್ನು ಒಡೆದಿದ್ದ ಕಾರಣಕ್ಕೆ ಅವರಿಗೆ 5,000 ರೂಪಾಯಿ ದಂಡ ವಿಧಿಸಲಾಗಿದೆ.

ರವಿವಾರ ಈ ಘಟನೆ ನಡೆದಿದ್ದು, ಬಸ್‌ ಚಾಲಕ ಕಂ ನಿರ್ವಾಹಕ ಮುಕ್ಕಣ್ಣ ಕುಕನೂರು ಅವರು ಕಲ್ಲು ಎಸೆದ ಮಹಿಳೆಯನ್ನು ಎಲ್ಲ ಪ್ರಯಾಣಿಕರೊಂದಿಗೆ ಬಸ್ಸನ್ನು ಮುನಿರಾಬಾದ್‌ ಪೊಲೀಸ್‌ ಠಾಣೆಗೆ ತೆಗೆದುಕೊಂಡು ಹೋದರು. ನಂತರ ಮಹಿಳೆಯಿಂದ ₹5 ಸಾವಿರ ದಂಡ ಕಟ್ಟಿಸಿಕೊಂಡು ವಾಪಸ್ ಕಳುಹಿಸಲಾಗಿದೆ.

ಇಳಕಲ್‌ ಬಳಿ ಪಾಪನಳ್ಳಿ ಗ್ರಾಮದ ಮಹಿಳೆಯೊಬ್ಬರು ಕೊಪ್ಪಳ ಜಿಲ್ಲೆಯ ಹುಲಿಗಿಯ ಹುಲಿಗೆಮ್ಮದೇವಿ ದರ್ಶನಕ್ಕೆಂದು ಬಂದಿದ್ದರು. ಬಸ್‌ಗಾಗಿ ಹುಲಿಗಿ ಕ್ರಾಸ್‌ ಬಳಿ ಸುಮಾರು ನಾಲ್ಕು ತಾಸು ಕಾಯ್ದರೂ ಬಸ್‌ಗಳನ್ನು ನಿಲ್ಲಿಸಿರಲಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತ ಮಹಿಳೆ ಕೋಪದಿಂದ ಬಸ್‌ನತ್ತ ಕಲ್ಲು ತೂರಿದ್ದಾರೆ ಎನ್ನಲಾಗಿದೆ. ಮಳೆ ಬರುತ್ತಿತ್ತು “ಇಳಕಲ್‌ಗೆ ಹೋಗುವ ಬಸ್‌ಗಾಗಿ ನಾಲ್ಕೈದು ತಾಸಿನಿಂದ ಕಾದಿದ್ದೆ. ಹಲವು ಬಸ್‌ಗಳು ಹೋದರೂ ನಿಲ್ಲಿಸಲಿಲ್ಲ. ಇದರಿಂದ ಸಿಟ್ಟು ಬಂದು ಕಲ್ಲು ಎಸೆದೆ” ಎಂದು ಮಹಿಳೆ ಹೇಳಿದ್ದಾರೆ.

ಬಸ್‌ ಗಾಜು ಒಡೆದಿದ್ದಕ್ಕೆ ₹5,000 ದಂಡ ಕಟ್ಟಬೇಕು, ಇಲ್ಲವಾದರೆ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ ನಂತರ ಮಹಿಳೆ ಕ್ಷಮೆಯಾಗಿಸಿ ದಂಡ ಕಟ್ಟಿ ಅದೇ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ.

Share This Article