ಜುಲೈ ೨೭ರ ವರೆಗೆ ಗೃಹ ಜ್ಯೋತಿಗೆ ಅರ್ಜಿ, ನಂತರ ವಿದ್ಯುತ್‌ ಅದಾಲತ್

khushihost
ಜುಲೈ ೨೭ರ ವರೆಗೆ ಗೃಹ ಜ್ಯೋತಿಗೆ ಅರ್ಜಿ, ನಂತರ ವಿದ್ಯುತ್‌ ಅದಾಲತ್

ಬೆಳಗಾವಿ, ೧೨- ಜುಲೈ 27ರವರೆಗೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದ್ದು ಇನ್ನೆರಡು ತಿಂಗಳಲ್ಲಿ ಕೆಇಬಿ ಕಚೇರಿಗಳಲ್ಲಿ ಅದಾಲತ್ ನಡೆಸುತ್ತೇವೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ ಹೇಳಿದ್ದಾರೆ.

ರಾಜ್ಯ ಸರ್ಕಾರದ ಐದು ಗ್ಯಾರೆಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಕೆ ಜೆ ಜಾರ್ಜ ಅವರು ಉತ್ತರಿಸಿದರು.​ ಜುಲೈ ತಿಂಗಳ ಬಿಲ್ ಮುಂದಿನ ತಿಂಗಳ ಮೊದಲ ವಾರ ಬರುತ್ತದೆ.ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕದವರಿಗಾಗಿ ಈ ಅದಾಲತ್ ಪ್ರಾರಂಭಿಸುತ್ತೇವೆ. ಎಲ್ಲ ಅರ್ಹರಿಗೂ ಉಚಿತ ವಿದ್ಯುತ್ ಕೊಡಲು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ಯಾರೆಲ್ಲಾ ಗೃಹಜ್ಯೋತಿಯಡಿ ಅರ್ಜಿ ಹಾಕುವುದರಿಂದ ಬಿಟ್ಟು ಹೋಗಿದ್ದಾರೋ ಅವರಿಗಾಗಿ ಈ ಅದಾಲತ್ ನಡೆಸುತ್ತೇವೆ. ಅದಕ್ಕಾಗಿಯೇ ನಾವು ಈ ಯೋಜನೆಗೆ ಅಂತಿಮ ದಿನಾಂಕ ಕೊಟ್ಟಿಲ್ಲ. ಆದಷ್ಟು ಎಲ್ಲಾ ಅರ್ಹರಿಗೂ ಉಚಿತ ವಿದ್ಯುತ್ ಕೊಡಲು ಪ್ರಯತ್ನ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.

ಸದನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ಐದು ಗ್ಯಾರೆಂಟಿಗಳ ಬಗ್ಗೆ ಪ್ರಸ್ತಾಪಿಸಿದರು. ಕುಮಾರಸ್ವಾಮಿಯವರ​ ಮಾತಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ ಬೆಂಬಲ ವ್ಯಕ್ತಪಡಿಸುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯೆ ಪ್ರವೇಶಿಸಿ ಮಾತನಾಡಿ, ಯತ್ನಾಳ ಅವರೇ ನೀವು ತಿಂಗಳಿಗೆ 100, 110 ಯೂನಿಟ್ ವಿದ್ಯುತ್ ಸರಾಸರಿ ಬಳಸುತ್ತಿದ್ದೀರಿ ಅಂದುಕೊಳ್ಳಿ, ಒಂದು ವರ್ಷದಿಂದ ಬಳಸುತ್ತಿದ್ದರೇ ಸರಾಸರಿ ಅಷ್ಟೇ ಬರುತ್ತದೆ. ಹಾಗಾಗಿ ನಿಮಗೆ 200 ಯೂನಿಟ್ ವಿದ್ಯುತ್ ಕೊಡುವ ಅಗತ್ಯ ಇದೆಯಾ? ಎಂದರು.

ನೀವು ಪದೇ ಪದೇ ಮಾತಾಡಿದರೆ ಸಂಸದೀಯ ಪಟು ಆಗುವುದಿಲ್ಲ. ನಿಮ್ಮನ್ನು ವಿರೋಧ ಪಕ್ಷದ ನಾಯಕನಾಗಿಯೂ ಮಾಡುವುದಿಲ್ಲ. ನನಗೆ ಇರುವ ಮಾಹಿತಿ ಪ್ರಕಾರ ನಿಮ್ಮನ್ನು ವಿರೋಧ ಪಕ್ಷದ ನಾಯಕ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ನುಡಿದರು.

Share This Article