ಮುಂಜಾನೆ ಸತ್ತ, ಮಧ್ಯಾಹ್ನ ಎದ್ದ, ಸಂಜೆ ಮತ್ತೆ ಸತ್ತ!

khushihost
ಮುಂಜಾನೆ ಸತ್ತ, ಮಧ್ಯಾಹ್ನ ಎದ್ದ, ಸಂಜೆ ಮತ್ತೆ ಸತ್ತ!

ರಾಮನಗರ, ಎ. 9:  ಬೆಳಗ್ಗೆ ದಿಢೀರ್‌ ಕುಸಿದು ಬಿದ್ದು ಸತ್ತ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರಕ್ಕೆ ಸಂಬಂಧಿಕರು, ಸ್ನೇಹಿತರು ಸಿದ್ಧತೆ ನಡೆಸುತ್ತಿದ್ದಾಗಲೇ ಮಧ್ಯಾಹ್ನ ಆತ ಎದ್ದು ಕುಳಿತು ಎಲ್ಲರಲ್ಲೂ ದಿಗ್ಭ್ರಮೆ ಮೂಡಿಸಿದ. ಆದರೆ ದುರದೃಷ್ಟವಶಾತ್‌ ಆ ವ್ಯಕ್ತಿ ಸಂಜೆ ಹೊತ್ತಿಗೆ ಕೊನೆಯುಸಿರೆಳೆದ.

ಇಂಥದ್ದೊಂದು ವಿಚಿತ್ರ ಪ್ರಸಂಗಕ್ಕೆ ಚನ್ನಪಟ್ಟಣ ತಾಲೂಕು ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಹುಚ್ಚಯ್ಯನದೊಡ್ಡಿ ಗ್ರಾಮ ಸಾಕ್ಷಿಯಾಯಿತು.

ಗ್ರಾಮದ ಕೂಲಿಕಾರ್ಮಿಕ ಶಿವರಾಮು (57) ಬೆಳಗ್ಗೆ 7 ಗಂಟೆ ಸುಮಾರಿಗೆ ಕುಸಿದು ಬಿದ್ದಿದ್ದು, ತ‌ಕ್ಷಣ ಕುಟುಂಬದವರು ಚಿಕಿತ್ಸೆಗೆಂದು ಚನ್ನಪಟ್ಟಣಕ್ಕೆ ಕರೆತರುತ್ತಿದ್ದಾಗ ಮಾರ್ಗಮಧ್ಯೆ ಇವರ ಉಸಿರು ನಿಂತಿತು. ಬಳಿಕ ಮನೆಗೆ ತಂದು ಶವಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿತ್ತು. ಆದರೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶಿವರಾಮು ಎದ್ದು ಕುಳಿತರು.

ನೆರೆದವರೆಲ್ಲರೂ ಅಚ್ಚರಿಯಿಂದ ನಗರದ ಬಿಜೆಎಲ್‌ ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು, ಶಿವರಾಮುವಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿಗೆ ಕರೆದೊಯ್ಯಲು ತಿಳಿಸಿದ್ದಾರೆ.

ಬೆಂಗಳೂರಿಗೆ ಕರೆದೊಯ್ಯುತ್ತಿದ್ದಾಗ ಮತ್ತೆ ಅಸ್ವಸ್ಥಗೊಂಡರು. ಆಗ ಅವರನ್ನು ಸಮೀಪದ ರಾಮನಗರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದಾಗ ಶಿಮ ರಾಮು ಮೃತಪಟ್ಟಿದ್ದಾರೆ ಎಂದರು.

Share This Article