ಯೋಗಿ ರಾಜ್ಯದಲ್ಲಿ ಮಹಿಳಾ ಕಬಡ್ಡಿ ಆಟಗಾರ್ತಿಯರಿಗೆ ಪುರುಷರ ಶೌಚಾಲಯದಲ್ಲಿ ಊಟ; ವಿಡಿಯೋ ವೈರಲ್

khushihost
ಯೋಗಿ ರಾಜ್ಯದಲ್ಲಿ ಮಹಿಳಾ ಕಬಡ್ಡಿ ಆಟಗಾರ್ತಿಯರಿಗೆ ಪುರುಷರ ಶೌಚಾಲಯದಲ್ಲಿ ಊಟ; ವಿಡಿಯೋ ವೈರಲ್

ಸಹರಾನ‌ಪುರ: ಉತ್ತರ ಪ್ರದೇಶದ ಮಹಿಳಾ ಕಬಡ್ಡಿ ಆಟಗಾರ್ತಿರಿಗೆ ಪುರುಷರ ಶೌಚಾಲಯದಲ್ಲಿ ಊಟ ಬಡಿಸಿ ಯೋಗಿ ಆದಿತ್ಯನಾಥ ಸರ್ಕಾರ ವಿವಾದಕ್ಕೆ ಕಾರಣವಾಗಿದೆ.

ಕ್ರೀಡಾಳುಗಳು ಶೌಚಾಲಯದಲ್ಲಿಟ್ಟಿದ್ದ ಪಾತ್ರೆಗಳಿಂದ ತಟ್ಟೆಗಳಿಗೆ ಆಹಾರ ಹಾಕಿಕೊಂಡು ಬಾಗಿಲ ಬಳಿ ಊಟ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ.

ಈ ವಿಡಿಯೋಗಳನ್ನು ಸೆಪ್ಟೆಂಬರ್ 16 ರಂದು ಸಹರಾನ‌ಪುರದಲ್ಲಿ ಬಾಲಕಿಯರ 17 ವರ್ಷದೊಳಗಿನವರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯ ಸಂದರ್ಭದಲ್ಲಿ ಕೆಲವು ಆಟಗಾರರು ಚಿತ್ರೀಕರಿಸಿದ್ದಾರೆ.

ವಿದ್ಯಾರ್ಥಿನಿಯರು ಶೌಚಾಲಯ ಮತ್ತು ಮೂತ್ರಾಲಯದ ಬಳಿ ವಿವಿಧ ಪಾತ್ರೆಗಳಿಂದ ಅನ್ನ ಮತ್ತು ಸಾಂಬಾರ ಪದಾರ್ಥಗಳನ್ನು ಬಡಿಸುತ್ತಿರುವುದನ್ನು ವೀಡಿಯೊಗಳಲ್ಲಿ ಕಾಣಬಹುದು. ಅನ್ನದ ಪಾತ್ರೆಗಳ ಪಕ್ಕದಲ್ಲಿ ಒಂದು ಕಾಗದದ ಮೇಲೆ ಉಳಿದ ಪೂರಿಗಳು ಇದ್ದವು. ಒಂದು ನಿಮಿಷದ ವಿಡಿಯೋದಲ್ಲಿ ಪುರುಷರ ಮೂತ್ರಾಲಯಗಳ ಮತ್ತು ವಾಶ್ ಬೇಸಿನ್‌ಗಳು ಕಂಡು ಬಂದಿವೆ.


ನಂತರ ಅದರ ಗೇಟ್ ಬಳಿ ಶೌಚಾಲಯದ ನೆಲದ ಮೇಲೆ ಅನ್ನದ ತಟ್ಟೆಯನ್ನು ಇಟ್ಟಿದ್ದು, ಆಟಗಾರರು ಆಹಾರವನ್ನು ತೆಗೆದುಕೊಂಡು ಶೌಚಾಲಯದಿಂದ ಹೊರಬರುವುದನ್ನು ಕಾಣಬಹುದು.
ಇನ್ನು ಎರಡನೇ ವೀಡಿಯೊದಲ್ಲಿ ಕೆಲಸಗಾರರು ಪಾತ್ರೆಗಳನ್ನು ಎತ್ತಿಕೊಂಡು ಆಹಾರವನ್ನು ಬೇಯಿಸುತ್ತಿರುವ ಈಜುಕೊಳದ ಬಳಿ ಹೊರಗೆ ತರುವುದನ್ನು ತೋರಿಸುತ್ತದೆ.

ವೈರಲ್ ವಿಡಿಯೋಗಳ ವಿವಾದದ ನಂತರ ರಾಜ್ಯ ಸರ್ಕಾರ ಸಹರಾನ‌ಪುರ ಕ್ರೀಡಾ ಅಧಿಕಾರಿ ಅನಿಮೇಶ ಸಕ್ಸೇನಾ ಅವರನ್ನು ಅಮಾನತುಗೊಳಿಸಿದೆ. ಮಳೆಯಿಂದಾಗಿ ಆಹಾರವನ್ನು ಬದಲಾವಣೆ ಮಾಡಲು ಶೌಚಾಲಯದಲ್ಲಿ ಇರಿಸಲಾಗಿದೆ ಎಂದು ಸಕ್ಸೇನಾ ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅಲ್ಲಿನ ಜಿಲ್ಲಾಧಿಕಾರಿ ಅಖಿಲೇಶ ಸಿಂಗ್, ಜಿಲ್ಲಾ ಕ್ರೀಡಾ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ತನಿಖೆಗೆ ಆದೇಶಿಸಿದ್ದೇನೆ ಮತ್ತು ಸಂಬಂಧಿಸಿದವರು ಮೂರು ದಿನಗಳಲ್ಲಿ ವರದಿಯನ್ನು ಸಲ್ಲಿಸುತ್ತಾರೆ. ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಮಳೆಯಾಗುತ್ತಿದ್ದುದರಿಂದ ಈಜುಕೊಳ ಪ್ರದೇಶದಲ್ಲಿ ಊಟದ ವ್ಯವಸ್ಥೆ ಮಾಡಿದ್ದೇವೆ, ಈಜುಕೊಳದ ಪಕ್ಕದಲ್ಲಿ ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ಆಹಾರ ಇಡಲಾಗಿತ್ತು, ಕ್ರೀಡಾಂಗಣದಲ್ಲಿ ಕೆಲ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮಳೆಯ ಕಾರಣ ಆಹಾರ ಇಡಲು ಬೇರೆ ಸ್ಥಳ ಇರಲಿಲ್ಲ ಎಂದು ಅನಿಮೇಶ ಸಕ್ಸೇನಾ ಈ ಹಿಂದೆ ಹೇಳಿದ್ದರು.

ರಾಜ್ಯ ಮಟ್ಟದ ಕಬಡ್ಡಿ ಆಟಗಾರರಿಗೆ ಅಗೌರವ ತೋರಿದ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಹಲವು ರಾಜಕೀಯ ಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ.

ಬಿಜೆಪಿಯು ವಿವಿಧ ಪ್ರಚಾರಗಳಿಗೆ ಕೋಟಿಗಟ್ಟಲೆ ಖರ್ಚು ಮಾಡುತ್ತದೆ, ಆದರೆ ಆಟಗಾರರಿಗೆ ಸರಿಯಾದ ವ್ಯವಸ್ಥೆ ಮಾಡಲು ಹಣವಿಲ್ಲ, ಸ್ಥಳವಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ತೆಲಂಗಾಣ ರಾಷ್ಟ್ರ ಸಮಿತಿಯ ಸಾಮಾಜಿಕ ಮಾಧ್ಯಮ ಸಂಚಾಲಕ ವೈ ಸತೀಶ ರೆಡ್ಡಿ ಟ್ವೀಟ್ ಮಾಡಿ, ಉತ್ತರಪ್ರದೇಶದಲ್ಲಿ ಕಬಡ್ಡಿ ಆಟಗಾರರಿಗೆ ನೀಡಲಾದ ಆಹಾರವನ್ನು ಶೌಚಾಲಯದಲ್ಲಿ ಇಡಲಾಗಿದೆ. ಬಿಜೆಪಿ ಆಟಗಾರರನ್ನು ಈ ರೀತಿ ಗೌರವಿಸುತ್ತದೆಯೇ? ನಾಚಿಕೆಗೇಡಿನ ಸಂಗತಿ ಎಂದು ಬರೆದಿದ್ದಾರೆ.

ರಾಷ್ಟ್ರೀಯ ಲೋಕದಳ ಅಧ್ಯಕ್ಷ ಜಯಂತ ಚೌಧರಿ ಅವರು ರೆಡ್ಡಿ ಅವರ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಘಟನೆಯನ್ನು ಅಗೌರವ ಎಂದು ಕರೆದಿದ್ದಾರೆ.

Share This Article