ಚಲಿಸುತ್ತಿದ್ದ ರೈಲಿಗೆ ನೂಕಿ ತಳ್ಳಿದ ಪ್ರಿಯಕರ : ಸುದ್ದಿ ಕೇಳಿ ಹೃದಯಾಘಾತದಿಂದ ಯುವತಿ ತಂದೆ ಸಾವು 

khushihost
ಚಲಿಸುತ್ತಿದ್ದ ರೈಲಿಗೆ ನೂಕಿ ತಳ್ಳಿದ ಪ್ರಿಯಕರ : ಸುದ್ದಿ ಕೇಳಿ ಹೃದಯಾಘಾತದಿಂದ ಯುವತಿ ತಂದೆ ಸಾವು 

ಚೆನ್ನೈ: ಚಲಿಸುವ ರೈಲಿಗೆ ಮಗಳನ್ನು ನೂಕಿ ಕೊಲೆ ಮಾಡಿರುವ ಸುದ್ದಿ ಕೇಳಿ ಹೃದಯಾಘಾತಕ್ಕೀಡಾಗಿದ್ದ ತಂದೆ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಚೆನ್ನೈನಲ್ಲಿ ನಡೆದಿದ್ದು ಮೃತ ಯುವತಿಯನ್ನು ಎಂ. ಸತ್ಯ ಎಂದು ಗುರುತಿಸಲಾಗಿದೆ. ಆಕೆಯ ತಂದೆ ಮಾಣಿಕ್ಯಂ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಚೆನ್ನೈನ ಸೆಂಟ್​ ಥಾಮಸ್​ ಮೌಂಟ್​ ರೈಲು ನಿಲ್ದಾಣದಲ್ಲಿ ಚಲಿಸುವ ರೈಲಿಗೆ ಸತ್ಯಳನ್ನು ದೂಡಿ ಕೊಲೆ ಮಾಡಲಾಗಿದೆ. ಮಗಳ ಸಾವಿನ ಸುದ್ದಿ ಕೇಳಿ ಮಾಣಿಕ್ಯಂಗೆ ಎದೆ ನೋವು ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಸತ್ಯ ಅವರ ತಾಯಿ ರಾಮಲಕ್ಷ್ಮೀ ಅಡಂಬಕ್ಕಮ್​ ಪೊಲೀಸ್​ ಠಾಣೆಯಲ್ಲಿ ಹೆಡ್​ ಕಾನ್ಸ್​ಟೇಬಲ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸತೀಶ್​ (23)ನನ್ನು ವಶಕ್ಕೆ ಪಡೆಯಲಾಗಿದೆ. ಘಟನೆಯ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಥೊರೈಪಕ್ಕಂ ಬಳಿ ಬಂಧಿಸಲಾಗಿದೆ. ಪ್ರೇಮ ವಿಚಾರಕ್ಕೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಈ ಘಟನೆ ನಿನ್ನೆ ಮಧ್ಯಾಹ್ನ ಸೆಂಟ್​ ಥಾಮಸ್​ ಮೌಂಟ್​ ರೈಲು ನಿಲ್ದಾಣದಲ್ಲಿ ನಡೆದಿದೆ. ತೃತೀಯ ವರ್ಷದ ಬಿಬಿಎ ವಿದ್ಯಾರ್ಥಿನಿಯಾಗಿದ್ದ ಸತ್ಯ, ನಿನ್ನೆ ಕಾಲೇಜಿಗೆ ತೆರಳಲು ರೈಲು ನಿಲ್ದಾಣಕ್ಕೆ ಬಂದಿದ್ದಳು.

ಈ ಸಮಯದಲ್ಲಿ ಆರೋಪಿ ಮತ್ತು ಸತ್ಯ ನಡುವೆ ಮಾತಿನ ಚಕಮಕಿ ನಡೆದಿದ್ದು, ತಾಳ್ಮೆ ಕಳೆದುಕೊಂಡ ಆರೋಪಿ, ಸತ್ಯಳನ್ನು ಚಲಿಸುವ ರೈಲಿನ ಮುಂದೆ ನೂಕಿದ್ದಾನೆ. ಈ ವೇಳೆ ರೈಲು ನಿಲ್ದಾಣದಲ್ಲಿದ್ದವರು ಆಕೆಯನ್ನು ರಕ್ಷಿಸಲು ಯತ್ನಿಸಿದಾದರೂ ಅದು ಸಾಧ್ಯವಾಗಲಿಲ್ಲ.

ಪೊಲೀಸರು ಸ್ಥಳಕ್ಕೆ ಬರುವ ಮುನ್ನವೇ ಆರೋಪಿ ಸತೀಶ್​ ಅಲ್ಲಿಂದ ಪರಾರಿಯಾಗಿದ್ದ. ವಿಶೇಷ ತಂಡ ರಚಿಸಿ, ಶೋಧ ಕಾರ್ಯಾಚರಣೆಗೆ ಇಳಿದು, ಆರೋಪಿಯನ್ನು ನಿನ್ನೆಯೇ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಆರೋಪಿ ವಿರುದ್ಧ ಸತ್ಯಳ ಪಾಲಕರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Share This Article